ಅಪಮೃತ್ಯು ಪರಿಹರಿಸೋ ಅನಿಲದೇವ
ಜಗನ್ನಾಥದಾಸರುಅಪಮೃತ್ಯು ಪರಿಹರಿಸೋ ಅನಿಲದೇವ ।
ಕೃಪಣವತ್ಸಲನೆ ಕಾವರ ಕಾಣೆ ಜಗದೊಳಗೆ ॥ಪ॥
ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು
ಎನಗಿಲ್ಲ ಆವಾವ ಜನುಮದಲ್ಲಿ ।
ಅನುದಿನವು ಎಮ್ಮ ನೀನುದಾಸೀನ ಮಾಡುವುದು
ಅನುಚಿತವು ಜಗದಿ ಸಜ್ಜನ ಶಿಖಾಮಣಿಯೇ ॥೧॥
ಕರಣಾಭಿಮಾನಿ ಕಿಂಕರರು ಮೂರ್ಲೋಕ ದೊರೆ
ಹರಿಯು ನಿನ್ನೊಳಗಿಪ್ಪ ಸರ್ವಕಾಲ ।
ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ
ಗುರುವರ್ಯ ನೀ ದಯಾಕರನೆಂದು ಬಿನ್ನೈಪೆ ॥೨॥
ಭವರೋಗ ಮೋಚಕನೆ ಪವಮಾನರಾಯ ನಿ-
ನ್ನವರವನು ನಾನು ಮಾಧವಪ್ರಿಯನೆ ।
ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ
ದಿವಿಜಗಣ ಮಧ್ಯದಲಿ ಪ್ರವರ ನೀನಹುದೋ ॥೩॥
ಜ್ಞಾನಾಯು ರೂಪಕನು ನೀನಹುದೊ ವಾಣಿ ಪಂ-
ಚಾನನಾದ್ಯಮರರಿಗೆ ಪ್ರಾಣದೇವ ।
ದೀನವತ್ಸಲನೆಂದು ನಾನಿನ್ನ ಮೊರೆಹೊಕ್ಕೆ
ದಾನವಾರಣ್ಯ ಕೃಶಾನು ಸರ್ವದ ಎಮ್ಮ ॥೪॥
ಸಾಧನಶರೀರವಿದು ನೀ ದಯದಿ ಕೊಟ್ಟದ್ದು
ಸಾಧಾರಣವಲ್ಲ ಸಾಧುಪ್ರಿಯನೆ ।
ವೇದವಾದೋದಿತ ಜಗನ್ನಾಥವಿಠ್ಠಲನ
ಪಾದಭಜನೆಯನಿತ್ತು ಮೋದಕೊಡು ಸತತ ॥೫॥